Friday, November 11, 2011

ಭಾವನೆಗಳ ನಾಗಾಲೋಟ...




ಭಾವನೆಗಳ  ನಾಗಾಲೋಟ
ಹುಚ್ಚು  ಕುದುರಯೆಂತೆ ಕೆನೆದಿದೆ
ಛೆ!!! ಇದೇನಿದು ಮನಸ್ಸಿನ ಹುಚ್ಚಾಟ ಹಿಡಿತಕೆ ಸಿಗುತ್ತಿಲ್ಲ..
 ಸುಸ್ತಾದೆ ಯೋಚನಾ ಲಹರಿಯಲಿ ತೇಲಾಡಿ

ಇಬ್ಬಾಗವಾಗಿ ಹೋದೆನು
ಬುದ್ದಿ ಹೇಳುತಿದೆ ಅದ್ಯಾವುದೋ ಸುದ್ದಿ
ಮನಸೇ ನಿನಗೆ ನಾ ಹೇಗೆ ಹೇಳಲಿ ಬುದ್ದಿ
ಸಾಗರದಂಚಲ್ಲಿ ಕಟ್ಟು ಒಂದು ಪ್ರೀತಿಯ ಗುಬ್ಬಿ ಗೂಡು
ಬಂದರೇನಂತೆ ಅಲೆ ಅಬ್ಬರದಿ
ಮತ್ತೆ ಮತ್ತೆ ಕಟ್ಟೋಣ ಬೆಚ್ಚಗಿನ ಗೂಡು
ಹಾಡುತ ನಮ್ಮದೇ ಮನದ ಹಾಡು

ಯಾವ ಹಮ್ಮು ಬಿಮ್ಮಿನ ಚಿಂತೆ ನಮಗೇಕೆ
ಹೃದಯ ಒಡೆದ ಸದ್ದು ಕೂಡ ಕೇಳದಾಗಿದೆ
ನಮ್ಮ ದಾರಿಯಲ್ಲಿ ಅದು ಚೂರು ಚೂರಾಗಿ ಚುಚ್ಚುತಿದ್ದರು
ಮೂಡದಿರಲಿ ಮೊಗದ ಮೇಲೆ ಯಾವುದೇ ನೋವಿನ ನೆರಿಗೆ
ಬೇಡ ಮತ್ತೆ ನಮಗೆಂದು ಯಾವುದೇ ಭಾವುಕತೆಯ ಸುಲಿಗೆ

 ತಂಪು ಗಾಳಿಯು ಕದ್ದೊಯ್ದಿದೆ  ಆ ನನ್ನ ನಿಟ್ಟುಸಿರು
ಬಿಗಿದಪ್ಪಿದೆ ಬೀಸುಗಾಳಿ ಸಾಂತ್ವನ ಹೇಳುತ
ಕೆನ್ನೆಯಿಂದ ಜಾರಿದ ಆ ಕಣ್ಣೀರ ಕೊಂಡೊಯ್ಯಿತು
ಕಾಲ್ತೊಳೆಯಲು ಬಂದ ಅಲೆ ಅಲೆಯು

ಹೊತ್ತು ಕಳೆದರು ಇನ್ನು ಮುಗಿದಿಲ್ಲ
ಭಾವಗಳ ಹುಚ್ಚು ಕುಣಿತ
ಸುಮ್ಮನೆ ಕುಳಿತಿರುವೆ ಮತ್ತೆ ನಾಳೆ ಬಂದೆ ಬರುವೆ
ಇದೆ ಜಾಗ ನನಗಾಗಿ ಕಾದಿರಲಿ
ಸಣ್ಣ ಮೌನ ಗೀತೆ ನನಗಾಗಿ ಅಲೆ ಅಲೆಯಾಗಿ ಮೂಡಿ ಬರಲಿ

                            ***ಸಿರಿ***

Thursday, November 3, 2011

ಯಾರಿಗೂ ಅರ್ಥವಾಗದ ಒಗಟು... ನನ್ನ ಹುಚ್ಚು ಪ್ರೀತಿಯ ಗುಟ್ಟು





















ಖಾಲಿಯಾಗಿವೆ ಪದಗಳು ಬತ್ತಳಿಕೆಯಲ್ಲಿ
ಮಾತೆ ಮೂಡುತ್ತಿಲ್ಲ ನೀರವತೆಯ ಸಂಗದಲ್ಲಿ
ಕೇಳಲು ಏನು ಉಳಿದಿಲ್ಲ..
ಹೇಳಲು ಮೌನದ ಸಮ್ಮತಿಯಿಲ್ಲ

ಸ್ನೇಹ ಸತ್ತು ಬಹಳವೇ ಸಮಯವಾಗಿದೆ
ಇನ್ನು ಸ್ಮಶಾನ ಮೌನ
ಸೂತಕದ ಛಾಯೆ...
ಹೃದಯ ರೋಧನಕ್ಕೆ ಎಲ್ಲಿದೆ ಕೇಳುವ ಕಿವಿ
ಕೇಳಿದ ಕಿವಿಗಳೆಲ್ಲ ಕಿವುಡು
ನೋಡುವ ನೋಟವೆಲ್ಲ ಕುರುಡು

ಇಟ್ಟ ಹೆಜ್ಜೆಯೆಲ್ಲ ಅದೇ ದಾರಿ
ಗುನುಗುವ ಹೃದಯದ ಮಾತುಗಳೇ
ನನ್ನೊಡಲ ಸಂಗಾತಿ
ಮೂಡಿದ ಮನದ ಭಾಷೆಯೇ
ನನ್ನೆದೆಯ ಸಂಗತಿ

ನಿಂತಲ್ಲೇ ಸುಮ್ಮನೆ ನಿಂತೇ
ನನ್ನೊಡನೆ ನನ್ನ ಘನ ಘೋರ ಯುದ್ದ
ನಡೆವಾಗ ಹುಚ್ಚು ರೋಷ
ಗಾಳಿಯೊಡನೆ ಗುದ್ದಾಟ
ಸುಸ್ತಾದಾಗ ಏನೋ ಪೇಚಾಟ
ಸುಮ್ಮನೆ ಕುಳಿತೆ..
ಶೂನ್ಯದೆಡೆಗೆ ನೆಟ್ಟಿದೆ ನೋಟ

ಯಾರಿಗೂ ಅರ್ಥವಾಗದ ಒಗಟು
ನನ್ನ ಹುಚ್ಚು ಪ್ರೀತಿಯ ಗುಟ್ಟು

Monday, September 12, 2011

ನೀ ಬರುವ ದಾರಿ ಇದೆ ಎಂದು
ನಾ  ಕಾಯುತಿರುವೆ  ನಿನಗಾಗೆ  ಇಂದು

ನೀ ಬರುವೆ  ಎಂದು ಹೇಳಿ  ಹೋಗಿ 
ಬಹಳವೇ ಸಮಯವಾಗಿದೆ
ಆಗಿನಿಂದಲೂ ನಿನ್ನ ಕಾಯುವುವಿಕೆಯೇ
ನನ್ನ ಕೆಲಸವಾಗಿದೆ..



Monday, August 29, 2011

ಪ್ರೀತಿಯ ದಾರಿಯೆಲ್ಲ ಒಪ್ಪ ಓರಣ..

ಒಲವಲಿ.. ನಿನ್ನ ಒಲವಲಿ..
ನಾ ನಿನಗೊಲಿದೆನು ನಿನ್ನ  ಒಲವಲಿ..
ಮಾತೊಂದನು  ನೀನಾಡದೆ
ನನ್ನ ಒಪ್ಪಿದೆ ನಿನ್ನ ಕಣ್ಣಂಚಲಿ
ಪೆದ್ದು ಮನಸ ಕದ್ದೆಯಲ್ಲೇ
ಕಣ್ಣೋಟದ ಸಂಚಲಿ..
ನನ್ನಲಿ ನಾನಿಲ್ಲದಾದೆನೆ ಅದೇನೋ ಗಲಿಬಿಲಿ

ಹುಚ್ಚನಾಗಿ  ಅಲೆದೆನು ಅದೆಲ್ಲೋ ಅದೇನೋ ಗುಂಗಲಿ
ಮಾತೆಲ್ಲ ಹಾಡಾಯಿತು ನಿನ್ನ ಮಾತಿನ ಮತ್ತಲ್ಲಿ
ಸುತ್ತಲು ಕತ್ತಲೋ ಬೆಳಕೋ ಯಾವ ಗೊಡವೆ ನನಗಿನ್ನೇಕೆ
ನಾ ಈ ಜಗವನೆ ಗೆದ್ದೇ ನಿನ್ನ ನಗುವ ಮತ್ತಲಿ
ನೀ ಬಳಿ ಇರಲು ಇಲ್ಲೇ ಸ್ವರ್ಗ; ನೀನೆ ನನ್ನ ಬಳುವಳಿ

ನನ್ನಲ್ಲೇ ನೀ ಉಳಿದು ಹೋದೆ.. ಅಬ್ಬಾ... ಎಂಥಹ ಅಚ್ಚರಿ
ಕಣ್ಮುಚ್ಚಿದರೆ ನಿನ್ನದೇ ಒಡನಾಟ..
ಎದ್ದಾಗ. ನೀಬಳಿ ಇರದಿರಲು.. ಏನೋ ಚೂರು ಗಾಬರಿ
ಮತ್ತೆ ಕಣ್ಮುಚ್ಚಲು ಅದೆಷ್ಟು ಸಿಹಿ ಸಂಭ್ರಮ
ನೀನೆ ಮತ್ತೆ ಬಳಿಯಿರಲು ನನ್ನ ಎದುರಲಿ...

ಹೇಳದೆ ಕೇಳದೆ ನಾ ಕಟ್ಟಿರುವೆ  ಮನದ ಬಾಗಿಲಿಗೆ
ನಿನ್ನದೇ ನೆನಪಿನ ತೋರಣ...
ಈ ಪರಿಯ ಹುಚ್ಚಿಗೆ, ಈ ಪರಿಯ ಪ್ರೇಮಕೆ
ಹೇಳು ನೀನೆ ತಾನೇ ಕಾರಣ
ಎದೆಯ ಬಾಗಿಲಲ್ಲೇ ನಾ ಕಾದಿರುವೆ
ಪ್ರೀತಿಯ ದಾರಿಯೆಲ್ಲ ಒಪ್ಪ ಓರಣ..

Wednesday, August 3, 2011

ಹಾಡು ಹಕ್ಕಿ...ಹಾಡು


ಹಾಡು ಹಕ್ಕಿ.. ನೀನು ಹಾಡು ಹಕ್ಕಿ..
ಬೇಡ ನಿಂಗೆ ಯಾವ ಭೀತಿ
ಇರಲಿ ಮನದಲ್ಲಿ ನನಗಾಗೆ ಚೂರು ಪ್ರೀತಿ

ಹಾಡು ಹಕ್ಕಿ ಹಾಡು..
ನನ್ನ ಮನದ ಹಾಡು
ನನ್ನ ನೋವುಗಳನ್ನೆಲ್ಲಾ ಸಾಲು ಸಾಲಾಗಿ ಬರೆದಿಹೆ
ಈಗ ಮನವೆಲ್ಲ ಖಾಲಿ ಖಾಲಿ
ಮನದಣಿಯೆ ಹಾಡು..
ನಾನಿಲ್ಲೇ ನಿನ್ನದೇ ನಿರೀಕ್ಷೆಯಲ್ಲಿ ಕುಳಿತಿರುವೆ ನೋಡು
ಯಾರು ಕೇಳಿದರೆನಂತೆ..? ಕೇಳದಿದ್ದರೆನಂತೆ..?
ನಾನಿರುವೆ ನಿನಗೆ.. ನನಗಾಗಿ ನೀನು..


ಕೂಡಿ ಹಾಡೋಣ..
ಹಾಡಿ ಕುಣಿಯೋಣ...
ನಮಗೇಕೆ ಈ ಲೋಕದ ಚಿಂತೆ
ನಿನ್ನ ನೋವಿಗೆ ದನಿಯಾಗಿರುವೆ ನಾನು
ನನ್ನ ನೋವಿಗೆ ದನಿಯಾಗಿ ನೀನು..
ನಿನ್ನ ದನಿಯಲ್ಲಿ ನೋವೆಲ್ಲಾ ಮರೆತೆ!!!
ನನ್ನ ಬಾಳಿನ ಸಂಜೀವಿನಿ ನೀನು!!!

ಹಾಡು ಹಕ್ಕಿ ಹಾಡು..
ನನ್ನೀ ಜೀವ ತಂಪಾಗಲಿ..
ಕಣ್ಣೇರು ಬತ್ತಿ ಹೋಗಲಿ..
ಮತ್ತೆಂದು ಈ ಹೃದಯ ಚೂರಾಗದಿರಲಿ..
ಹಾಡು ಹಕ್ಕಿ ಹಾಡು...




Wednesday, July 27, 2011

ಸ್ನೇಹವೆಂಬುದು ಎಲ್ಲದಕ್ಕೂ ಮೀರಿದ್ದು...



ಮಾತೆ ಅರ್ಥವಾಗದವನಿಗೆ..
ಮೌನವೇನು ಅರ್ಥವಾದೀತು...?
ಇಷ್ಟು ದಿನದ ಸ್ನೇಹದ ಬೆಲೆ ಮರೆತು ಹೋದವನಿಗೆ
ಚುಚ್ಚು ನುಡಿಗಳ ಗಾಯದ ನೋವೇನು ತಿಳಿದೀತು..

ಬರಿ ತನ್ನ ನೋವೆ ಹಿರಿದೆನ್ನುವವನಿಗೆ
ತಾನು ಇನ್ನೊಬ್ಬರ ನೋಯಿಸಿದ್ದರ ಪರಿವೆ ಎಲ್ಲಿದ್ದೀತು?
ಬೇರೆಯವರ ತಪ್ಪೆ ದೊಡ್ಡದು ಎನ್ನುವವನಿಗೆ
ತನ್ನ ತಪ್ಪಿನ ತಿಳುವಳಿಕೆ ಎಲ್ಲಿದ್ದೀತು?

ಕೋಪದಲ್ಲಿ ಮೂಗನ್ನು ಕೊಯ್ದುಕೊಳ್ಳುವವನಿಗೆ
ತನ್ನ ಕೋಪದಲ್ಲಿ ಪ್ರೀತಿಯೇ ಕಾಣದವನಿಗೆ
ತಾನು ಕಳೆದುಕೊಂಡದ್ದರ ಮೌಲ್ಯವೆಲ್ಲಿ ತಿಳಿದೀತು?

ಕೋಪ ನಮ್ಮನ್ನು ಸುಡುತ್ತದೆ..
ಪ್ರೀತಿ ನೆಮ್ಮದಿ ತರುತ್ತದೆ
ಸ್ನೇಹ ಬಾಳಿಗೆ ಅರ್ಥಕೊಡುತ್ತದೆ

ಪ್ರೀತಿ ಹೆಚ್ಚೋ? ಸ್ನೇಹ ಹೆಚ್ಚೋ?
ಎಂಬ ಹುಚ್ಚು ಕಲ್ಪನೆ ಬೇಡ
ಸ್ನೇಹವೆಂಬುದು ಎಲ್ಲದಕ್ಕೂ ಮೀರಿದ್ದು...

ಸಿಹಿ ಸ್ನೇಹವ ನೆನೆ..
ಕಹಿ ಕೋಪವ ಮರೆ...

Friday, July 1, 2011

ನಿನ್ನ ಭಾವಗಳ ದೋಚಿ ನಾ ಕವಿಯಾದೆ..




ಎಷ್ಟೊಂದು ಕವಿತೆಗಳು ಮೂಡಿವೆ...
ನಿನ್ನದೇ ಸ್ಪೂರ್ತಿಯಲ್ಲಿ...
ನಾ ಪುಟ್ಟ ಕವಯಿತ್ರಿಯಾದೆ..
ನಿನ್ನ ಭಾವಗಳ ಗೀಚುವುದರಲ್ಲಿ..

ಎಲ್ಲರಿಗೂ ಎಷ್ಟೊಂದು ಮೆಚ್ಚುಗೆ ಎಷ್ಟೊಂದು ಅಚ್ಚರಿ
ನನಗಾಗಿ ಒಂದೇ ಪ್ರಶ್ನೆ ಇದ್ಯಾವ ಭಾವ ರೂಪಾಂತರದ ಪರಿ
ನನಗೂ ತಿಳಿದಿಲ್ಲ ಗೆಳೆಯ ನೀನೇ ಉತ್ತರ ಹೇಳು
ಅದೇ ಸರಿ...

ನಿನ್ನ ಚಿತ್ರ ಗೀಚಲೇ?.. ಭಾವ ದೋಚಲೇ?
ಕನಸುಗಳ ಕದಿಯಲೇ? ನೆನಪಿನ ಚಾದರ ನಿನಗೆಂದೇ ಹೆಣೆಯಲೇ?
ಹಾಡಾಗಿ ನಿನ್ನ ಕರೆಯಲೇ?
ತಂಗಾಳಿಯಾಗಿ ನಿನ್ನ ಬಳಿ ಸುಳಿಯಲೇ?

 ಎಷ್ಟು ಬರೆದರೂ ಮುಗಿಯುತ್ತಲೇ ಇಲ್ಲ...
ನೀ ಮೂಡಿಸಿರುವ ಛಾಪು..
ದಿನಕ್ಕೊಂದು ಭಾವಗಳ ಕದಿಯಿತ್ತಿರುವೆ
ದಿನಕ್ಕೊಂದು ರೂಪು..

ನಿನ್ನ ಭಾವಗಳ ದೋಚಿ ನಾ ಕವಿಯಾದೆ..
ನನ್ನ ಹೃದಯವ ದೋಚಿ ನೀ ನನ್ನ ಸಿರಿಯಾದೆ...

                                                             ***ರಂಜನಿ ಎಸ್ ಬಳಿಸಾವಿರ್***

Thursday, June 30, 2011

ನಗು..

ಒಮ್ಮೆ ನಗು..
ಯಾರಿಗಾಗಿಯೂ ಅಲ್ಲ.. ಕೇವಲ ನಿನಗಾಗಿ ನಗು..
ಮನಸು ಹಗುರವಾಗಿ ಹಕ್ಕಿಯಾಗಿ ಹಾರಲಿ
ಎಲ್ಲೋ ನೋವುಗಳು ನಿನ್ನ ಬಿಟ್ಟು ದೂರ ಹಾರಿಹೊಗಲಿ
ನೆನ್ನೆಗಳ ಕಹಿ ನೆನಪುಗಳು ಬಾಳ ಪುಟದಿಂದ ಅಳಿಸಿಹೋಗಲಿ
ಇಂದು ನಾಳೆಗಳ ಹೊಸ ಹುರುಪಿನ ಶಕೆ ಶುರುವಾಗಲಿ
ಎಲ್ಲ ಚಿಂತೆಗಳ ಮರೆತು ಒಮ್ಮೆ ನಕ್ಕು ಬಿಡು
ಆ ನಿನ್ನ ಮುದ್ದು ಮನಸ್ಸು ಮತ್ತೆಂದು ಮುದುಡದಿರಲಿ..
ಆ ನಿನ್ನ ನಗು ಎಂದು ಶಾಶ್ವತವಾಗಿರಲಿ...

ಒಮ್ಮೆ ಬರುವ ನಾಳೆಗಳ ನೆನೆ..
ಎಲ್ಲ ನೋವುಗಳ ಮರೆ..
ಬೇಡ ಭಾವನೆಗಳ ಹೊರೆ..


ಮತ್ತೆ ಬರುವೆ..ಒಬ್ಬಳೇ ನಿನ್ನ ಸವಿ ನೆನಪುಗಳ ಕದಿಯಲು..

ತಣ್ಣನೆ ಹೊತ್ತಲ್ಲಿ  ಒಬ್ಬಳೇ ಕುಳಿತೆ..
ಯಾಕೋ ಏನೋ ಅದೇನೋ ಚಿಂತೆ
ಕಾಡಿದೆ ಯಾವುದೊ ಕನಸಿನ ಕಂತೆ...

ನನ್ನ ಮೌನವ ಕದ್ದು ಕೇಳಿದೆ ಪಕ್ಕದಲ್ಲಿ ಹಬ್ಬಿದ ಲತೆ..
ತಂಪು ತಂಗಾಳಿ ತಬ್ಬಿ ಕೇಳಿತು ಏನೇ ನಿನ್ನ ಕಥೆ ...

ಎಷ್ಟು ಸೊಗಸು ಅಲ್ಲವೇ ಸವಿ ನೆನಪುಗಳ ಮೆಲಕು
ಮುದುಡಿದ್ದ ಮನಕ್ಕೆ ಎಲ್ಲಿಲ್ಲದ ಚುರುಕು...
ಮೊಗದಲ್ಲೇ ಸಣ್ಣಗೆ ಮಿಂಚಿ ಮಾಯವಾಗುತಿದೆ ಒಂದು ತುಂಟ ನಗು..

ಗೊತ್ತೇ? ನನಗೆ ನಿನ್ನದೇ ಹಂಬಲ..
ಯಾಕೆ ಈ ಥರ?
ಯಾಕೀ ಕಾತುರ?
ಉತ್ತರವಿಲ್ಲದ ಪ್ರಶ್ನೆಯೋ?
ಪ್ರಶ್ನೆಗೆ ನೀನೆ ಉತ್ತರವೋ?

ಹ್ಹ ಹ್ಹ ಹ್ಹ...
ನಿನ್ನ ಮೆಚ್ಚಿ.. ಹಚ್ಚಿಕೊಂಡ ..ಪ್ರೀತಿಯ ಹುಚ್ಚಿ ನಾನು..
ನನ್ನ ಮೆಚ್ಚಿ.. ಪ್ರೀತಿ ಹಂಚಿದ ಮುದ್ದು ಹುಡುಗ ನೀನು...

ನಿನ್ನ ನೆನಪಲ್ಲಿ ಹೊತ್ತು ಕಳೆದದ್ದೇ ತಿಳಿದಿಲ್ಲ
ಮಬ್ಬು ಕವಿದಿದ್ದರ ಅರಿವೇ ಇಲ್ಲ
ಮತ್ತೆ ಬರುವೆ..ಒಬ್ಬಳೇ ನಿನ್ನ ಸವಿ ನೆನಪುಗಳ ಕದಿಯಲು..
ನಮ್ಮ ನಾಳೆಗಳ ಸಿಹಿಗನಸುಗಳ ಹೆಣೆಯಲು..

                                                                      ***ರಂಜನಿ ಎಸ್ ಬಳಿಸಾವಿರ್***

Sunday, June 5, 2011

ಬರುವೆ ಓಡಿ ಓಡಿ ಒಲಿದು..

ಗೆಳೆಯ ಅದೇ ಹಾದಿ..
ಆಗ ನೀನ್ನಿದ್ದೆ ಜೊತೆಯಾಗಿ..
ನನ್ನ ನಗುವಿಗೆ ನಗುವಾಗಿ..
ಮಾತಿನ ಮಳೆಯಾಗಿ..
ಮುದ್ದಿನ ಗಣಿಯಾಗಿ..
ಈ ಹುಚ್ಚು ಹುಡುಗಿಯ ಮೆಚ್ಚಿನ ಗೆಳೆಯನಾಗಿ...

ಅದೆಲ್ಲೇ ಹೊಂಚು ಹಾಕಿತ್ತೋ ಆ ದುಷ್ಟ ವಿಧಿ
ನಾವೆಂದರೆ ಅದಕ್ಕೇನೋ ಹೊಟ್ಟೆ ಉರಿ..
ಮಾತು ಮಾತಲ್ಲೇ ಮುನಿಸು ನುಸುಳಿತ್ತು
ನಮಗೆ ಅರಿವಾಗುವುದರಲ್ಲೇ ನಗೆ ಮಾಯವಾಗಿತ್ತು..

ವಿಧಿಗಿಂತ ದುಷ್ಟ ನೀನು...
ನನ್ನ ಮೇಲೆ ಕೋಪಿಸಿಕೊಂಡು ನೀ ಹೊರಟು ಹೋಗಿದ್ದೆ
ಈ ಹುಚ್ಚು ಹುಡುಗಿಯ ಆಸೆ ನುಚ್ಚು ನೂರು ಮಾಡಿದ್ದೆ..
ನಾ ನಿನ್ನ ಅದೆಷ್ಟು ಹಚ್ಚಿ ಕೊಂಡಿದ್ದೆ..
ರಚ್ಚೆ ಹಿಡಿದು ನೀ ಬಿಟ್ಟು ಹೋದಲ್ಲೆ ಕುಳಿತಿದ್ದೆ
ನಿನ್ನದೋ ಎಂದಿನಂತೆ ಕಲ್ಲು ಹೃದಯ
ಅಲ್ಲೇ ನನ್ನ ಬಿಟ್ಟು ಮುಖ ತಿರುಗಿಸಿ ಮುನ್ನಡೆದಿದ್ದೆ..

ಥು.. ಕಟುಕ..ನಾನೇ ಬರುತಿರುವೆ ನಿನ್ನ ಬಳಿ..
ನನ್ನಾಣೆ... ಇವಾಗಲಾದರು ನಿನ್ನ ಕಲ್ಲು ಹೃದಯ ಕರಗಲಿ..
ಮತ್ತೆ ನನ್ನ ನಿನ್ನ ಸ್ನೇಹ ಚಿಗುರಲಿ
ಎಲ್ಲರು ಅದನ್ನು ಕಂಡು ಎಂದಿನಂತೆ ಹೊಟ್ಟೆ ಉರಿದುಕೊಳ್ಳಲಿ
ಅದನ್ನು ನೋಡಿ ನಮ್ಮ ಸ್ನೇಹ ಇನ್ನು ಗಟ್ಟಿಯಾಗಲಿ..

                                              -ನಿನ್ನ ಗೆಳತಿ

                                                                 ***ರಂಜನಿ ಎಸ್ ಬಳಿಸಾವಿರ್***







Friday, June 3, 2011

ಮೆಲುಕು..

ಒಂಟಿತನ ಹೇಗೆ ಶಾಪವೋ..
ಕೆಲವೊಮ್ಮೆ  ದೇವರು ಕೊಟ್ಟ ವರ..

ಸುಮ್ಮನೆ ಒಬ್ಬಳೇ ಕೂರುವುದಲ್ಲೂ ಏನೋ ಹಿತ..
ಒಮ್ಮೆ ನೀನಿಲ್ಲ ಎಂಬ ಕೊರಗು..
ಮರು ಕ್ಷಣ ನಿನ್ನ ಮಾತು ಕಿವಿಯಲ್ಲಿ ಕೇಳಿಸಿದ ಹಾಗೆ..
ನೀ ಬಳಿ ಸುಳಿದ ಹಾಗೆ..
ನೀ ನಕ್ಕ ಭಾಸ..
ಮೊದಲ ಭೇಟಿಯ ಸಿಹಿ..
ಇನ್ನು ಹಸಿರಾಗೇ ಇದೆ..

ನೀ ಈಗ ಬಂದೆ ಅಂತ  ಹೇಳಿ  ಹೋದರು..
ಅದೇನೋ ಚಡಪಡಿಕೆ..
ನಿನ್ನ ಬರುವಿಕೆಗೆ ಕಾದು ಕುಳಿತಿರುವೆ..
ನನ್ನ ಬಳಿ ಹೆಚ್ಚೇನು ಇಲ್ಲ

ಬೊಗಸೆಯಷ್ಟು ಪ್ರೀತಿ ಹಿಡಿದ ನಿನಗೆಂದೇ ಕಾದಿರುವೆ..
ನಿನ್ನ ನೆನಪುಗಳದ್ದೆ ಮೆಲಕು..


 

Sunday, May 29, 2011

ಸಂಬಂಧ?..ನಂಬಿಕೆ?..ಬದುಕಿನ ನಿತ್ಯ ಸತ್ಯ..?


ಸಂಬಂಧಗಳು ಕೆಲವೊಮ್ಮೆ ಎಷ್ಟೊಂದು ಗಟ್ಟಿ
ಕೆಲವೊಮ್ಮೆ ನಾವು ಅಂದುಕೊಂಡದ್ದಕ್ಕಿಂತ ಟೊಳ್ಳು
ಪಾಯವೇ ಬರಿ ಹಸಿ ಸುಳ್ಳು

ಮಾತೇ ಹೆಚ್ಚು ನಂಬಿಕೆಗಿಂತ
ಒಂದೇ ಒಂದು ಸಣ್ಣ ಬಿರುಕು ಸಾಕು
ನಿಮಿಷದಲ್ಲೇ ಸಂಬಂಧವೆಂಬ ಗಾಳಿ ಗೋಪುರ ಬುಡಮೇಲು

ಕೆಲವರಿಗೆ ಮುಗಿಯದ ಪ್ರೀತಿಯ  ಅಮಲು
ಮತ್ತೊಬ್ಬರಿಗೆ ಜೀವನವಿಡಿ ನೋವಿನ ನಶೆ
ಸದಾ ಅಗಲುವಿಕೆಯ ದಿಗಿಲು
ಒಮ್ಮೆ ಮನಸ್ಸು ಹೂವಷ್ಟು ಹಗುರ
ಮಗದೊಮ್ಮೆ ಬಿಕ್ಕಳಿಸುವುದು.. ನೋವು ಅಪಾರ
ಒಮ್ಮೆ ನಿಗೂಢ..ಕ್ಲಿಷ್ಟ..ಗಣಿತದ ಸಮಸ್ಯೆಯಂತೆ..
ಮತೊಮ್ಮೆ ಹೂ ಕಂಪು..ಮನ ತಂಪು..ಸಿಹಿ ಉತ್ತರ

ಯೋಚಿಸಿದಷ್ಟು ಜಟಿಲ..
ಬಿಡಿಸಿದಷ್ಟು ಕಗ್ಗಂಟು..
ಬದುಕಿನ ಚೌಕಬರ..ಗುರಿ ಮುಟ್ಟಿದರು ಮುಟ್ಟಬಹುದು
ಇಲ್ಲ ಯಾವುದೊ ಬಿರುಕಿಂದ ಸಂಬಂದವೇ ಚಿತ್ತಾಗಬಹುದು..

ಕೊನೆಗೆ ಹೇಳಬಹುದಾದದ್ದು ಒಂದೇ ಮಾತು...
ಅವರವರ ಬಾವಕ್ಕೆ ತಕ್ಕಂತೆ ಬಕುತಿ...
ಪಾಲಿಗೆ ಬಂದದ್ದು ಪಂಚಾಮೃತ...
ಇದೇ ಬದುಕಿನ ನಿತ್ಯ ಸತ್ಯ...


                                                                 ***ರಂಜನಿ ಎಸ್ ಬಳಿಸಾವಿರ್***


Tuesday, May 24, 2011

ಬಿಡುಗಡೆ.....


ನಾ ಗೆದ್ದೇ..
ಸೋಲಿಂದ ಮೇಲೆದ್ದೆ..
ಹೊಸ ಗಾಳಿ ಹೊಸ ಮುಗಿಲು..
ಹೊಸ ಹೆಜ್ಜೆ ಹೊಸ ಹರವು
ಮೆಟ್ಟಿ ನಿಂತೇ ಎಲ್ಲಾ ಎಲ್ಲೇ
ನಾ ಎಲ್ಲವನು ಗೆಲ್ಲಬಲ್ಲೆ

ನಿನ್ನ ಯಾವುದೇ ಚ್ಚುಚ್ಚು ನುಡಿ ನನಗಿನ್ನು ಕೇಳಿಸದು  
ನಮ್ಮಿಬರ  ಹೆಜ್ಜೆ ಮತ್ತೆಂದು ಒಂದಾಗದು
ಕಣ್ನೀರೆಂದು ಹೊರಹೊಮ್ಮದು..

ಇಂದು ಬಿಡುಗಡೆಯಾಗಿದೆ
ಮನಸ್ಸು ಹೊಸ ದಿಗಂತದಲ್ಲಿ ಗೆಲುವಿನ ಹೆಸರು ಬರೆದಾಗಿದೆ
ನೀನು ನನ್ನನ್ನು ಒಬ್ಬೊಂಟಿಯಾಗಿ ಬಿಟ್ಟುಹೋದ ಆ ದಾರಿ ಸವೆದು
ಹೊಸ ವಸಂತ ಹೊಸ ಹಸಿರು ಹೊಸ ಹಾದಿ ಮೂಡಿದೆ
ಎಲ್ಲೆಡೆ ವನರಾಶಿಯ ತಳಿರು ತೋರಣ ಅತಿ ಮುದ್ದಿನಿಂದ ಸ್ವಾಗತಿಸಿದೆ

ಗೆಳೆತಿ ಗೆಲ್ಲುವೆ
ನೀ ಗೆದ್ದೇ ಗೆಲ್ಲುವೆ ಎಂದು
ಆ ಕೋಗಿಲೆ ಎಷ್ಟು ಸೊಗಸಾಗಿ  ಇನಿ ದನಿಯಲ್ಲಿ ಹಾಡಿದೆ..
ಬಟ್ಟಲು ಕಂಗಳಲ್ಲಿ ಮತ್ತೆ ಹೊಸ ನೂರಾಸೆ ಚಿಗುರಿದೆ..

                                                          ***ರಂಜನಿ ಎಸ್ ಬಳಿಸಾವಿರ್***

Friday, May 20, 2011

ನನ್ನಮ್ಮ...

ನನ್ನಮ್ಮ.. ಕನ್ನಡಮ್ಮ
ಒಬ್ಬಳು ಹಡೆದ್ದವ್ವ..
ಭರತ ಮಾತೆ ನಮ್ಮ ಹೊತ್ತವ್ವ..
ಕನ್ನಡಮ್ಮನ ಕಂದಮ್ಮಗಳೇ
ಯಾಕಿಷ್ಟು ದುರಾಸೆ
ಹೆತ್ತಮ್ಮನ ಬಿಟ್ಟು ಪರದೇಸಿಗಳಾಗುವಾಸೆ
ದುಡ್ಡಿನ ವ್ಯಾಮೋಹಕ್ಕೆ ತಾಯಿಯನ್ನೇ ತೊರೆವ ಅತಿಯಾಸೆ.
ದುಡ್ಡಿನಾಸಿಗೆ ಹುಟ್ಟಿದ ಮನೆಯನ್ನೇ ತೊರೆಯುವಿರಿ
ಒಡಹುಟ್ಟಿದವರ ಮರೆಯುವಿರಿ..
ಅತಿ ಆಸೆ ಮಿತಿ ಮೀರಿದರೆ ಗತಿ ಕೇಡೆ
ಇಲ್ಲೇ ಎಷ್ಟು ಸೊಗಸಿದೆ
ಕನ್ನಡಮ್ಮನ ಭಾರತ ಮಾತೆಯೇ ನಿಷ್ಕಲ್ಮಶ ಪ್ರೀತಿಯಿದೆ
ಹಸಿರು ಎಲ್ಲೆಡೆ ಹಾಸು ಹಾಸಿದೆ
ನಮ್ಮವರ ಮುಗ್ದ ಆಥಿತ್ಯವಿದೆ
ಬನ್ನಿ ಒಟ್ಟಿಗೆ  ಉತ್ತಿ ಬಿತ್ತುವ
ಬಂಗಾರ ಬೆಳೆಯುವ
ಮನದಲ್ಲಿ ಛಲವಿದೆ
ಕೈಯಲ್ಲಿ ಬಲವಿದೆ
ಒಬ್ಬರೇ ಗೆದ್ದರೆ ಏನು ಹಿತವಿದೆ
ಬನ್ನಿ ಒತ್ತಗೆ ಗೆಲ್ಲುವ
ನಮ್ಮೆಲ್ಲರ ಗೆಲುವನ್ನ ಇತಿಹಾಸದ ಪುಟಗಳಲ್ಲಿ ಸುವರ್ನಾಕ್ಷರದಲ್ಲಿ ಬರೆಯೋಣ...

ಅಂತರ......



ಪ್ರೀತಿ ಮಾತು ಕಡಿಮೆಯಾದ್ದೆಂದು ತಿಳಿಯಲೇ ಇಲ್ಲ
ಜೊತೆಗಿದ್ದರು ನಡುವೆ ಯಾಕಿಷ್ಟು ಅಂತರ ತೋಚಲೇ ಇಲ್ಲ
ಮಾತುಗಳೆಲ್ಲ ಕರಗಿದವೆಂದೋ
ಮೌನ ನಮ್ಮಿಬರ ನಡುವೆ ಮನೆ ಮಾಡಿದ್ದೆಂದೋ
ಸರಿಗಳೆಲ್ಲ ತಪ್ಪಾದವು..
ಸಿಹಿ ಮಾತು ಬತ್ತಿ ಹೋದವು
ಕಣ್ಣುಗಳು ಶೂನ್ಯದೆಡೆಗೆ
ಮುಂಚಿನ ಆಹ್ಲಾದ ಈಗಿಲ್ಲ
ಚ್ಚುಚಿ ಕೊಲ್ಲುತಿದೆ ಈ ಮೌನ
ಬತ್ತಿ ಬಾಡಿಹೋಗಿದೆ ಸ್ನೇಹ
ಈಗಲಾದರೂ ಎಚ್ಚೆತುಕೋ..
ಇಷ್ಟು ದಿನದ ಈ ಸ್ನೇಹವ ಉಳಿಸಿಕೋ
ಪ್ರೀತಿನ ಕಣ್ಣ ರೆಪ್ಪೆಯಲ್ಲಿಟ್ಟು ಕಾಪಾಡಿಕೋ..

                                                   ***ರಂಜನಿ ಎಸ್ ಬಳಿಸಾವಿರ್***      


Sunday, May 15, 2011

ನನ್ನ ಪ್ರೀತಿಯ ಕೊಡೆ ಹಿಡಿದು ನಿನಗಾಗೆ ಕಾದಿರುವೆ...

ಹಸಿ ಹಸಿ ಚಳಿಯಲ್ಲಿ ನಿನ್ನ ಸಿಹಿ ಸವಿ ನೆನಪು,
ತಂಪಾದ ನೆನಪೊಂದಿಗೆ  ಒಂದು ಬಿಸಿ ಚಹಾದ ಗುಟುಕು,
ಸೂರ್ಯ ಕೂಡ ಆಲಸಿಯಾದ
ಬೆಚ್ಚಗೆ ಮೋಡಗಳ ಚಾದರ ಹೊದ್ದು

ನಾ ನಿನ್ನ ಪ್ರೀತಿಗೆ ಕರಗಿ ನೀರಾದಂತೆ
ಬೆಂಬಿಡದ ಅದೇ ಸೋನೆ ಮಳೆ
ಹುಸಿ ಮುನಿಸಿನ ಗುಡುಗು
ನಿನ್ನಷ್ಟೇ ಸೊಗಸು ಆ ನಿನ್ನ ನೆನಪು
ಅದರಷ್ಟೇ ಸೊಗಸು ಮಳೆಗಾಲದ ನನ್ನ ನಿನ್ನ ನೆನಪಿನ ಪುಟಗಳು

ನಾ ಮೊಂಡು ಹಿಡಿದಾಗ ಕೆನ್ನೆ ಹಿಂಡಿ ತಲೆಗೆ ಮೊಟುಕಿ-
ಸುಮ್ಮನಾಗಿಸುವ ಆ ನಿನ್ನ ಮುದ್ದು ಪ್ರೀತಿ
ನನ್ನ ತುಂಟುತನಕ್ಕೆ ಕಿವಿ ಹಿಂಡಿದ ಆ ನಿನಪು..
ನಿನಗೆಂದೇ ನಾ ಬರೆದ ಆ ಎಲ್ಲ ಕವನಗಳ ನೋಡಿ
ಅರಳುತಿದ್ದ ಆ ಬಟ್ಟಲು ಕಂಗಳು..
ನಾ ಮಗುವಂತೆ ಹಠ ಹಿಡಿದಾಗ ನೀನಿತ್ತ ಕೈತುತ್ತೂಟ
ಎಲ್ಲರಂತಲ್ಲ ಈ ನನ್ನ ಹುಚ್ಚು ಹುಡುಗಿ ಎಂದು
ನೀ ತೋರಿದ ಆ ಅಭಿಮಾನ.. ಆ ಮುದ್ದು ಪ್ರೀತಿ

ಎಲ್ಲಾ ಸಿಹಿ ಎಲ್ಲಾ ತಂಪು..ಎಲ್ಲ ಹೊಸತು
ಮೊದಲ ಮಳೆಗೆ ಆ ಭೂಮಿ ಸೂಸಿದ ಹೊಚ್ಚ ಹೊಸ ಕಂಪಂತೆ
ಇಂದಿನ ದಿನದ ಕೊನೆಯ ಹನಿ ಸೂರಿಂದ ಜಾರುವ ಮೊದಲು
ಬೇಗ ನೀ ಬಂದು ಬಿಡು

ಎಲ್ಲಿದ್ದರು ನನ್ನ ನೆನಪಲ್ಲಿ ನೀ ಬೆಚ್ಚಗೆ ಕುಳಿತಿರುವೆ
ನಾನಿಲ್ಲಿ ನನ್ನ ಪ್ರೀತಿಯ ಕೊಡೆ ಹಿಡಿದು ನಿನಗಾಗೆ ಕಾದಿರುವೆ
                                                       ***ರಂಜನಿ ಎಸ್ ಬಳಿಸಾವಿರ್*** 

Monday, May 2, 2011

ಮುದ್ದು ಚಂದಿರ.....

ಮುದ್ದು  ಚಂದಿರ ...
ಯಾಕೀ ನಾಚಿಕೆ..
ನನ್ನ ದೃಷ್ಟಿ ತಾಕುವುದೆಂದೋ?
ಹಾಗೇನಿಲ್ಲ..ಅದಾಗಲೇ ನಿನ್ನ ಕೆನ್ನಯ ಮೇಲೆ ಕಪ್ಪು ಬೊಟ್ಟು ಇಟ್ಟಾಗಿದೆ..
ಆ ತಂಪು ಗಾಳಿ.. ಆ ಮೋಡಗಳ ಮರೆಯಲ್ಲಿ ನಿನ್ನ ತುಂಟಾಟ.. ಎಷ್ಟು ಸೊಗಸು
ನಿನ್ನ ತುಂಬು ಮೊಗ ನೋಡಿ ಯಾಕೋ ಉಕ್ಕಿಬಂದಿದೆ ಮುದ್ದು..
ನಾ ಚಿಕ್ಕವಳಿದ್ದಾಗ ಕೈ ತುತ್ತು ತಿನ್ನುತ್ತ ನೋಡಿದ್ದ ಆ ನೀನು ಈಗಲೂ ಅಷ್ಟೇ ಸುಂದರ..
ನಿನ್ನ ಚೆಲುವಷ್ಟೇ ಆ ನೆನಪುಗಳು ಅತಿ ಮಧುರ..
ನಿನ್ನ ನೋಡಿದಾಗಲೆಲ್ಲ ನೆನಪಾಗುವುದು ನನಗೊಂದು ಮಾತು
ಕಾಲ ಬದಲಾದಂತೆಲ್ಲ ಬದಲಾಗುವುದು ನಿನ್ನ ರೂಪು..
ಹಾಗೆಯೇ ತಾನೇ ನಮ್ಮ ಜೀವನ ಕೂಡ,
ಇಂದು ಹುಣ್ಣಿಮೆ.. ಪ್ರಕಾಶಮಾನ..ನಗು ಬಹುಮಾನ
ಮತೊಮ್ಮೆ ಅಮಾವಾಸ್ಯೆ.. ಕಾರ್ಗತ್ತಲ್ಲು.. ಯಾರು ಕಾಣರು ಸುತ್ತಲು..
ನಿನ್ನಲ್ಲಿನ ಧೈರ್ಯ ನನಗು ಚೂರು ಕೊಡು..
ನನ್ನಲ್ಲಿನ ಬದಲಾವಣೆಯ ಆಗ ನೀನೆ ನೋಡು..
ನಾವಿಬ್ಬರು  ಕೂಡಿ  ಮಾತಾಡೋಣ  ಇಬ್ಬರು ನಡೆದು  ಬಂದ  ಸ್ನೇಹದ ಜಾಡು..
ನನ್ನ ಒಂಟಿತನಕ್ಕೆ ನೀ ಜೊತೆಯಾದ ಹಾಡು..
ನನಗೆ ನೀ ಜೊತೆಯಾಗಿ ಸ್ಪೂರ್ತಿಯಾದೆ..
ನಿನ್ನ ಗೆಳತಿಯಾದೆ ನಾನು..
ಈ ನಮ್ಮಿಬರ ಗೆಳೆತನ ಹಾಲಲ್ಲಿ ಬೆರೆತ ಜೇನು..

*** ರಂಜನಿ ಎಸ್ ಬಳಿಸಾವಿರ್ ***

Friday, April 29, 2011

ನೀರವತೆ...


ಒಂಟಿತನ ಎಂಬುದು ಜನಜಂಗುಳಿಯಲ್ಲೂ  ಕಾಡುವ ಆ ನಿನ್ನ ನೆನಪು,
ನಿನ್ನ ಜೊತೆಯಿಲ್ಲದ  ನಾನು,
ನಾನಿಲ್ಲದ ನೀನು,
ಸುಮ್ಮನೆ ಒಬ್ಬಳೇ ಕುಳಿತು ಕಣ್ಣೀರಾಗುವ ಆ ಕ್ಷಣ,
ಮಾತೆ ಬರದ ಆ ಹೊತ್ತಿನ ಮೌನ,
ಕಾರಣವಿಲ್ಲದೆ  ಮೂಡುವ ಆ ಹುಚ್ಚು ನಗೆ
ಗುರಿಯೇ ಇಲ್ಲದ ಆ ನಡೆ
ಮಾಸಿದ ನಗು ಹೊತ್ತ ಆ ಪೇಲವ ಮುಖ
ಎಲ್ಲರದು ಒಂದೇ ಪ್ರಶ್ನೆ...
ಸ್ಪೂರ್ತಿಯ ಚಿಲುಮೆ ಯಾಕೆ ಬರಿದಾಯ್ತು
ಹೂವಿನಂತ ನಗೆ ಎಲ್ಲಿ ಕಳೆದುಹೋಯ್ತು
ಉತ್ತರ ನಿನಗಲ್ಲದೆ ಯಾರಿಗೆ ತಿಳಿದಿರುತ್ತದೆ
ನೀನೆ ಒಮ್ಮೆ ಬಂದು ಹೇಳಿ ಬಿಡು
ಒಂದೇ ಒಂದು ಸಲ ನಿನ್ನ ನೋಡಬೇಕಿದೆ
ಕರುಣೆ ತೋರಿ ಬಂದು ಬಿಡು.. 

ಯಾರದು....

ನಾನೇ ನಿನ್ನ ಹೃದಯದ ರಾಣಿ ಅಂತ ಎಣಿಸಿದ್ದೆ,
ನಿನ್ನ ಹೃದಯದ ಪುಟ್ಟ ಗೂಡಲ್ಲಿ ನಾನೊಬ್ಬಳೆ ಮೆರೆದಿದ್ದೆ,
ಯಾರಿಗೆ ತಿಳಿದಿತ್ತು ನಿನ್ನ ಲೆಕ್ಕಾಚಾರ
ಅದ್ಯಾರದೋ ಹಸಿ ಹೆಜ್ಜೆ ಗುರುತು ಕಾಣಿಸುತಿದೆ
ನಿನ್ನ ಹೃದಯದಲ್ಲಿ ಮತ್ತೆ ಯಾರದೋ ಪಿಸುದನಿ ಕೇಳಿಸಿದೆ
ಯಾರೋ ನಿನ್ನ ಮನದ ಬಾಗಿಲ ತಟ್ಟಿ-
-ಒಳ ಬಂದುದು ನಿಚ್ಚಳವಾಗಿ ಕೇಳಿಸಿದೆ...
ಮನಸ್ಸು ಮೂಕವಾಗಿ ರೋದಿಸಿದೆ-
-ನನ್ನ ಜಾಗದಲ್ಲಿ ಬೇರೊಬ್ಬರ ಕಂಡು..
ಮತ್ತೆ ಅದೇ ಮೌನ...ಅದೇ ನಾನು.. ಅದೇ ಬೇಸರ..
ಬರಿ ನಾನು.......

Thursday, April 28, 2011

ನಿನ್ನದೇ ನಿರೀಕ್ಷೆಯಲ್ಲಿ......

 
ನಿನ್ನ ಮನದ ಕೋಣೆಯಲ್ಲಿ ಕೂತಿರುವೆ,
ನಿನ್ನ ಹನಿ ಪ್ರೀತಿಗಾಗೆ,
ನಿನ್ನ ಪ್ರೀತಿಯ ಹಂಬಲದಿ,
ಯಾಕೆ ಈ ನಿರ್ಲಿಪ್ತ ಭಾವ,
ಕಣ್ಣು ಹನಿಗೂಡಿವೆ,
ನಿಲ್ಲುತ್ತಿಲ್ಲ ಬಿಕ್ಕಳಿಕೆ,
ಉಸಿರಂತು ಏರುಪೇರು,
ನಗುವಂತು ಮರೆತೆಹೋಗಿದೆ,
ನಿನ್ನೊಡನೆ ನಕ್ಕ ಆ ನಗುವೇ ಕೊನೆಯದು,
ನೀನು ನನ್ನ ತೊರೆದುಹೋದಲ್ಲೇ ಮೊಂಡು ಹಟದಿ ಕುಳಿತಿರುವೆ,
ನೀನೆ ಬಂದು ಸಂತೈಸುವೆಯೆಂದು,
ಹೆಚ್ಚೇನು ಬೇಡುತ್ತಿಲ್ಲ  ನಿನ್ನಿಂದ ನಾನು,
ಚೂರು ಪ್ರೀತಿ,
ಚೂರೇ ಚೂರು ಕಾಳಜಿ ಅಷ್ಟೇ,
ನಿನ್ನ ಆಸರೆಗಾಗೆ ಕಾದಿರುವೆ ಕೈ ಹಿಡಿದು ಕಾಪಾಡು,
ನಾನು ನಿನ್ನ ಕಣ್ಣುಗಳಿಂದ ಕಣ್ಣೀರಾಗಿ ಕರಗಿ,
ಮಣ್ಣಲ್ಲಿ ಮಣ್ಣಾಗುವ ಮುನ್ನ,
ನಿನ್ನ ನಿಟ್ಟುಸಿರುತಾಗಿ ನಾ ಬಾಡಿ ಹೋಗುವ ಮುನ್ನ...
                                                  ನಿನ್ನದೇ ನಿರೀಕ್ಷೆಯಲ್ಲಿ......
                                                     
***ರಂಜನಿ ಎಸ್ ಬಳಿಸಾವಿರ್ ***

Thursday, April 14, 2011

ಹೋಗೋಣವೆ ಸಣ್ಣ ವನವಾಸಕ್ಕೆ..

ಬಾ ಹೋಗೋಣ ಸಣ್ಣ ವನವಾಸಕ್ಕೆ,
ಸ್ವಲ್ಪ ದೂರ ಮಾತು... ಸ್ವಲ್ಪ ದೂರ ಮೌನ,
ಅಲ್ಲಿ ಬರಿ ನಾನು.. ಮತ್ತೆ ನೀನು...
ಹಕ್ಕಿಗಳ ಹಾಡು..ನಮ್ಮ ಪ್ರೀತಿಯ ಜಾಡು,
ಹಸಿರ ಹಾಸು... ಹೂವಿನಂಥ ನಮ್ಮ ಮನಸ್ಸು..
ಹಿತವಾದ ಸುಳಿ ಗಾಳಿ.. ಎಲ್ಲೆಡೆ ನಮ್ಮ ಪ್ರೀತಿಯ ಘಮ..
ಕೈಹಿಡಿದು ನಡೆದಾಗ ಸಪ್ತವರ್ಣದ ಕನಸು..
ಆಹಾ.. ಅದೇಕೋ ಆ ಸೂರ್ಯನಿಗೆ ನಮ್ಮಲ್ಲಿ ಹುಸಿ ಮುನಿಸು..
ಹಸಿರು ಲೋಕದಲ್ಲಿ ಹಿತವಾದ ತಂಪು ಮೌನ..
ಆಗಾಗ ನಮ್ಮ ಪಿಸುಮಾತಿನ, ನಗುವಿನ ಸಂಚಲನ..
ಎಷ್ಟು ಸೊಗಸು ವನರಾಶಿಯ ಸವಿ..
ಸವಿದಷ್ಟು ಮುಗಿಯದ ಪ್ರೀತಿಯ ಸಿರಿಯ ಅಕ್ಷಯ ಪಾತ್ರೆ..
ನಡೆದದೆಷ್ಟೋ.. ಆಡಿದ ಮಾತುಗಲೆಷ್ಟೋ..ಮೌನದ ಹಾಡೆಷ್ಟೋ
ಸೂರ್ಯ ಕೂಡ ಬೇಸರಿಸಿ ಮನೆಯ ಹಾದಿ ಹಿಡಿದಿರುವ,
ಮತ್ತೆ ನಮ್ಮನ್ನು ನಾಳೆ ನೋಡುವ ಕಾತರದಲ್ಲಿರುವ..
ಬಾ ಹೊತ್ತು ಸರಿದರೇನಂತೆ..ನಾಳೆ ಮತ್ತೆ ಜೊತೆಯಾಗುವ..
ಮತ್ತೆ ಹೊಸ ಹಾದಿ ಹಿಡಿಯುವ..  

Tuesday, April 12, 2011

ಮನದ ಮುಗಿಲಲ್ಲಿ ಮಳೆ

ಅದೇನೋ ಬೇಸರ..
ಅದ್ಯಾವುದೋ ನೆನಪು..
ಕದಡಿದೆ ಮನದ ಮುಗಿಲು..
ಕಾಮನ ಬಿಲ್ಲಿನ ಬದಲು..
ಹಠ ಹಿಡಿದ ಮಗುವಂತೆ ಒಂದೇ ಸಮನೆ ಸೋನೆ ಮಳೆ..
ಆಗೊಮ್ಮೆ ಈಗೊಮ್ಮೆ ನೋವಿನ ಗುಡುಗು..
ಮನದ ಮೂಲೆಯಲೆಲ್ಲೋ ಸಿಡಿಲು ಬಡಿದ ಅನುಭವ
ಜೋರಾಗೆ ಬೀಸಿದೆ ನೆನಪುಗಳ ಹುಚ್ಚು ಗಾಳಿ..
ಕೆಲವೊಮ್ಮೆ ಮಧ್ಯದಲ್ಲಿ ಆ ಸೂರ್ಯನ ಇಣುಕು ನೋಟ..
ಮತ್ತೊಮ್ಮೆ ಅಗುಲಿವಿಕೆಯ ಚಳಿ..
ಮಗದೊಮ್ಮೆ ಅಪ್ಪುಗೆಯ ಬೆಚ್ಚಗಿನ ಭಾವ..
ಇಂದೇಕೋ ಮನದಲ್ಲಿ ಶುರುವಾಗಿದೆ ಮತ್ತೊಮ್ಮೆ ಮುಂಗಾರು ಮಳೆ...

Friday, February 4, 2011

ಕಾಲ........

ಕಾತುರದಿ ಕಾದಿದ್ದೆ,
ಆತುರದಿ ಅವಸರಿಸಿದ್ದೆ ,
ನಿನ್ನ ತೋಳ ಸೇರುವ ಆಸೆಯಿಂದಿದ್ದೆ,
ನೀ ದೂರದಿ ನನಗೆಂದೆ ಕಾದಿದ್ದೆ,
ನನ್ನ ಬಾಚಿ ತಬ್ಬಿಕೊಳ್ಳುವ ಹಂಬಲದಲ್ಲಿದ್ದೆ,
ವಿಧಿಯಾಟ  ಬೇರೆಯದೇ ಆಗಿತ್ತು,
ಕಾಲ ನನ್ನ ನಿನ್ನ ನಡುವೆ ಹೊಂಚು ಹಾಕಿ ಕುಳಿತಿತ್ತು,
ನಿನ್ನ ತೋಳ ಸೇರುವಷ್ಟರಲ್ಲಿ ನಾ ಚಿರ ನಿದ್ರೆಗೆ ಜಾರಿದ್ದೆ,
ನಿನ್ನ ತೋಳಲ್ಲೇ ಕೊನೆ ಗಳಿಗೆ ಎಣಿಸಿದೆನೆಂಬ  ಒಂದೇ ನೆಮ್ಮದಿಯಲ್ಲಿ-
ನಾ ಕೊನೆಯ ಮುಗುಳು ನಗೆಯ ನಿನ್ನೆಡೆ ಬೀರಿ ಕಣ್ಣು ಮುಚ್ಚಿದ್ದೆ...

Wednesday, January 26, 2011

ಸವಿ ನೆನಪು.....

ಬರೆದೆ ಹೊಸ ಕವಿತೆ ನಿನ್ನದೇ ನೆನಪಿನಲ್ಲಿ,
ನಿನ್ನ ನನ್ನ ಸ್ನೇಹದ ಬೆಚ್ಚನೆ ಭಾವದಲ್ಲಿ,
ಏನೂ ತೋಚದೆ ಹಾಳೆಗಳೆಲ್ಲ ಖಾಲಿ ಖಾಲಿಯಾಗಿತ್ತು,
ಏಕೋ ಮನದಲ್ಲಿ ಮೌನ ಹಠ ಹಿಡಿದು  ಕುಳಿತಿತ್ತು,
ಮಾತು- ಮೌನದ ನಡುವೆ ಕಧನ ನಡೆದಿತ್ತು,
ಹೃದಯದ ಬಡಿತ ನಿಚ್ಚಳವಾಗಿ ಕೇಳಿಸಿತ್ತು,
ತಿಳಿ ತಂಗಾಳಿಯಲ್ಲೂ  ಮನ ನಿಟ್ಟುಸಿರು ಬಿಟ್ಟಿತ್ತು,
ನೆನಪಿನ ಓಟ ಮೈಲಿ ದೂರಗಳೆಡೆಗೆ ಎಲ್ಲೋ ಸಾಗಿತ್ತು,
ಯಾಕೋ ಏನೋ ನಿನ್ನ ನೆನಪು ಅತಿಯಾಗಿ ಕಾಡಿತ್ತು,
ನೀನು ನನ್ನ ಬಿಟ್ಟು ಬಹು ದೂರ ನಡೆದಾಗಿತು,
ಆಕಾಶದೆಡೆಗೆ ನನ್ನ ನೋಟ ಸರಿದಿತ್ತು,
ಆ ದೂರದ ನಕ್ಷತ್ರದಲ್ಲಿ ನಿನ್ನ ಮೊಗ ಕಂಡಿತ್ತು,
ದೈರ್ಯಗೆಡಬೇಡ ಗೆಳತಿ, ಸದಾ ನಾ ನಿನ್ನೊಡನೆ
ಇರುವೆ ಎಂದು ದೈರ್ಯ ಹೇಳಿತ್ತು...

Tuesday, January 18, 2011

ನನ್ನ ನಿನ್ನ ಸ್ನೇಹ



ಹೃದಯವನ್ನು ಬಚ್ಚಿಟಿದ್ದೆ - ಯಾರಾದರು ಕದಿಯಬಹುದೆಂದು,
ಕೋಪವ ಮೊಗದಿ ಬಿಚ್ಚಿಟಿದ್ದೆ- ಯಾರಾದರು ನಗುವ ಮೆಚ್ಚಬಹುದೆಂದು,
ಅದ್ಯಾವ ಗಳಿಗೆಯಲ್ಲಿ ನಿನ್ನ ಆಗಮನವಯಿತೋ?
ಅದ್ಯಾವ ಕ್ಷಣದಲ್ಲಿ ಸ್ನೇಹದ ತಂಗಾಳಿ ಬೀಸಿತೋ?
ನನ್ನ ಹೃದಯ ನಿನ್ನ ಪಾಲಾಯಿತು...
ಕೋಪ ಚೂರು ಚೂರಾಯಿತು...
ನಗುವು ಮೊಗದಲಿ ಮನೆ ಮಾಡಿತು..